ಕರ್ನಾಟಕದ ಪ್ರಸಿದ್ಧ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ’ರಾಜಧಾನಿ’ ಸಿನಿಮಾವನ್ನು ವೀಕ್ಷಿಸಿ ನಿರ್ದೇಶಕ ಕೆ.ವಿ.ರಾಜು ಅವರ ಕೈಚಳಕಕ್ಕೆ ಕೈ ಎತ್ತಿ ಸಲಾಮ್ ಹೊಡೆದಿದ್ದಾರೆ. ಇದು ನಡೆದದ್ದು ಮಂಗಳವಾರ ಸಂಜೆ ರೇಣುಕಾಂಬ ಥಿಯೇಟರನಲ್ಲಿ ಏರ್ಪಡಿಸಿದ್ದ ವಿಶೇಷ ಪ್ರದರ್ಶನದ ನಂತರ. ನಾವು ಯಾರಿಗೇನು ಕಡಿಮೆ ಇಲ್ಲ. ಪ್ರತಿ ಮನೆಯಲ್ಲೂ ’ರಾಜಧಾನಿ’ ಚಿತ್ರದಲ್ಲಿ ಬರುವ ಪಾತ್ರಗಳು ಕಂಡು ಬರುತ್ತದೆ. ಇದನ್ನು ಮೊದಲು ಹೆತ್ತವರು ನೋಡಬೇಕು. ಎಲ್ಲಾ ಹುಡುಗರು ಚೆನ್ನಾಗಿಯೇ ಅಭಿನಯಿಸಿದ್ದಾರೆ ಎಂದ ದ್ವಾರಕೀಶ್ ತಾಂತ್ರಿಕ ಗುಣಮಟ್ಟವನ್ನು, ಚಿತ್ರಕತೆಯನ್ನು ಹಾಗೂ ಸಂಗೀತವನ್ನು ಅಪಾರವಾಗಿ ಕೊಂಡಾಡಿದರು.
ಈಗಿನ ಕಾಲಕ್ಕೆ ಇದು ತಕ್ಕ ಚಿತ್ರ ಎಂದ ಡಾ. ಭಾರತಿ ವಿಷ್ಣುವರ್ಧನ ಇಂತಹ ಒಳ್ಳೆಯ ಸಿನಿಮಾವನ್ನು ಮೊದಲು ನೋಡಬೇಕಾದ್ದು ಹೆತ್ತವರು ಎಂದು ಅಭಿಪ್ರಾಯ ಪಟ್ಟರು. ಛಾಯಾಗ್ರಾಹಕ ವೇಣು ಅವರ ಕೆಲಸ, ತಾಂತ್ರಿಕ ಕೌಶಲ್ಯ ಸಹ ಈ ಸಂದೇಶ ತುಂಬಿದ ಚಿತ್ರದಲ್ಲಿ ಪಕ್ವವಾಗಿ ಹೇಳಲಾಗಿದೆ ಎಂದರು.
ಬಹಳ ದಿವಸವಾದ ಮೇಲೆ ಒಳ್ಳೆಯ ಸಿನಿಮಾ ನೋಡಿದೆ ಎಂದ ನಿರ್ಮಾಪಕ ರಾಮು ’ರಾಜಧಾನಿ’ ಚಿತ್ರ ಗಳಿಕೆಯಲ್ಲೂ ಚೆನ್ನಾಗಿದೆ ಎಂದರು.
ಹಿರಿಯ ನಟ ಶ್ರೀನಿವಾಸ ಮೂರ್ತಿ, ಸುಂದರ್ ರಾಜ್, ಪ್ರಮೀಳಾ ಜೋಷಾಯ್, ಮೇಘನಾ ರಾಜ್, ಅನಿರುದ್ಧ, ತಾರಾ, ಪ್ರಿಯಾಂಕ ಬುಲ್ಗಣ್ಣವರ್, ಹರ್ಷಿಕಾ ಪೂಣಚ್ಚ, ಅಜಿತ್, ಚಿತ್ರದ ನಿರ್ಮಾಪಕಿ ಸೌಮ್ಯ ಸತ್ಯನ್, ಚಿತ್ರದ ಕಲಾವಿದರು ಹಾಗೂ ಇನ್ನಿತರರು ’ರಾಜಧಾನಿ’ ವಿಶೇಷ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.